ಪಾಠ 8
ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರು
ಬಾಬೆಲ್ಗೆ ಹತ್ತಿರದಲ್ಲೇ ಊರ್ ಎಂಬ ಪಟ್ಟಣ ಇತ್ತು. ಅಲ್ಲಿದ್ದ ಎಲ್ಲರೂ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಅವರ ಮಧ್ಯೆ ಯೆಹೋವನನ್ನು ಮಾತ್ರ ಆರಾಧಿಸುತ್ತಿದ್ದ ಒಬ್ಬ ವ್ಯಕ್ತಿ ಇದ್ದ. ಅವನೇ ಅಬ್ರಹಾಮ.
ಒಂದು ದಿನ ಯೆಹೋವನು ಅಬ್ರಹಾಮನಿಗೆ ‘ನೀನು ನಿನ್ನ ಮನೆ, ನೆಂಟರು, ಊರನ್ನು ಬಿಟ್ಟು ನಾನು ತೋರಿಸೋ ದೇಶಕ್ಕೆ ಹೋಗು’ ಎಂದು ಹೇಳಿದನು. ‘ನಾನು ನಿನ್ನಿಂದ ಒಂದು ದೊಡ್ಡ ಜನಾಂಗ ಆಗೋ ತರ ಮಾಡ್ತೀನಿ. ನಿನ್ನಿಂದ ಅನೇಕ ಜನ್ರು ಆಶೀರ್ವಾದ ಪಡ್ಕೊಳ್ತಾರೆ’ ಎಂದೂ ಮಾತುಕೊಟ್ಟನು.
ಯಾವ ದೇಶಕ್ಕೆ ಹೋಗಬೇಕು, ಏನು ಮಾಡಬೇಕು ಅನ್ನುವುದೇನೂ ಅಬ್ರಹಾಮನಿಗೆ ಗೊತ್ತಿರಲಿಲ್ಲ. ಆದರೆ ಅವನಿಗೆ ಯೆಹೋವನ ಮೇಲೆ ಭರವಸೆ ಇತ್ತು. ಆದ್ದರಿಂದ ಅಬ್ರಹಾಮ, ಹೆಂಡತಿ ಸಾರ, ತಂದೆ ತೆರಹ ಹಾಗೂ ತಮ್ಮನ ಮಗನಾದ ಲೋಟ ದೇವರ ಮಾತಿಗೆ ವಿಧೇಯರಾಗಿ ಗಂಟು ಮೂಟೆ ಕಟ್ಟಿಕೊಂಡು ತಮ್ಮ ದೂರದ ಪ್ರಯಾಣ ಮಾಡಿದರು.
ಕೊನೆಗೂ ಅಬ್ರಹಾಮ ಮತ್ತವನ ಕುಟುಂಬ ಯೆಹೋವನು ತೋರಿಸಿದ ದೇಶಕ್ಕೆ ಬಂದರು. ಅದೇ ಕಾನಾನ್. ಆಗ ಅಬ್ರಹಾಮನಿಗೆ 75 ವರ್ಷ. ಅಲ್ಲಿ ಯೆಹೋವನು ಅಬ್ರಹಾಮನಿಗೆ ‘ನೀನು ಈಗ ನೋಡುತ್ತಿರುವ ದೇಶವನ್ನು ನಾನು ನಿನ್ನ ಮಕ್ಕಳಿಗೆ ಕೊಡ್ತೀನಿ’ ಎಂದು ಮಾತು ಕೊಟ್ಟನು. ಆದರೆ ಅಷ್ಟರಲ್ಲಿ ಅಬ್ರಹಾಮ ಮತ್ತು ಸಾರಳಿಗೆ ವಯಸ್ಸಾಗಿತ್ತು. ಅವರಿಗೆ ಮಕ್ಕಳಿರಲಿಲ್ಲ. ಆದರೆ ಯೆಹೋವನು ತನ್ನ ಮಾತನ್ನು ಹೇಗೆ ಉಳಿಸಿಕೊಂಡನು? ಮುಂದೆ ಕಲಿಯೋಣ.
“ನಂಬಿಕೆ ಇದ್ದಿದ್ರಿಂದಾನೇ ಅಬ್ರಹಾಮ ದೇವರ ಮಾತನ್ನ ಕೇಳಿ . . . ಅವನು ಎಲ್ಲಿಗೆ ಹೋಗ್ತಿದ್ದಾನೆ ಅಂತ ಅವನಿಗೇ ಗೊತ್ತಿಲ್ಲದೆ ಇದ್ರೂ ಅವನು ತನ್ನ ಊರು ಬಿಟ್ಟು ಹೋದ.”—ಇಬ್ರಿಯ 11:8