ಪಾಠ 25
ಆರಾಧನೆಗಾಗಿ ಒಂದು ಪವಿತ್ರ ಡೇರೆ
ಮೋಶೆ ಸಿನಾಯಿ ಬೆಟ್ಟದಲ್ಲಿದ್ದಾಗ ಒಂದು ವಿಶೇಷ ಡೇರೆಯನ್ನು ಕಟ್ಟಲು ಯೆಹೋವನು ಹೇಳಿದನು. ಇದನ್ನು ಪವಿತ್ರ ಡೇರೆ ಎನ್ನುತ್ತಾರೆ. ಈ ಪವಿತ್ರ ಡೇರೆಯಲ್ಲಿ ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸಬಹುದಿತ್ತು. ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಡೇರೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು.
ಯೆಹೋವನು ಮೋಶೆಗೆ ‘ಪವಿತ್ರ ಡೇರೆಯನ್ನ ಕಟ್ಟಲು ತಮ್ಮಿಂದಾದ ಸಹಾಯವನ್ನು ಮಾಡಲು ಜನರಿಗೆ ಹೇಳು’ ಎಂದನು. ಇಸ್ರಾಯೇಲ್ಯರು ಚಿನ್ನ, ಬೆಳ್ಳಿ, ತಾಮ್ರ, ರತ್ನ ಮತ್ತು ಒಡವೆಗಳನ್ನು ಕೊಟ್ಟರು. ಅದರ ಜೊತೆಗೆ ಉಣ್ಣೆ, ನಾರುಬಟ್ಟೆ, ಪ್ರಾಣಿ ಚರ್ಮ ಮತ್ತು ಇತರ ವಸ್ತುಗಳನ್ನೂ ಕೊಟ್ಟರು. ಜನರು ಉದಾರವಾಗಿ ವಸ್ತುಗಳನ್ನು ಕೊಟ್ಟರು. ಎಷ್ಟರ ಮಟ್ಟಿಗೆಂದರೆ ಮೋಶೆ ಅವರಿಗೆ ‘ನಮ್ಮ ಹತ್ತಿರ ಸಾಕಷ್ಟು ವಸ್ತುಗಳಿವೆ! ಇನ್ಮೇಲೆ ತರಬೇಡಿ’ ಎನ್ನಬೇಕಾಯಿತು.
ಅನೇಕ ಕುಶಲ ಸ್ತ್ರೀಪುರುಷರು ಪವಿತ್ರ ಡೇರೆಯನ್ನ ಕಟ್ಟಲು ಸಹಾಯಮಾಡಿದರು. ಯೆಹೋವನು ಅವರಿಗೆ ಬೇಕಾದ ವಿವೇಕವನ್ನು ಕೊಟ್ಟನು. ಕೆಲವರು ನೂಲು ಸುತ್ತಿದರು, ದಾರ ಹೆಣೆದರು, ಕಸೂತಿ ಹಾಕಿದರು. ಇತರರು ಹರಳುಗಳನ್ನು ಕಟ್ಟಿಕೊಟ್ಟರು, ಚಿನ್ನದ ಕೆಲಸ ಮಾಡಿದರು ಮತ್ತು ಮರ ಕೆತ್ತನೆ ಮಾಡಿದರು.
ಯೆಹೋವನು ಹೇಳಿದಂತೆಯೇ ಜನರು ಪವಿತ್ರ ಡೇರೆಯನ್ನ ಕಟ್ಟಿದರು. ಪವಿತ್ರ ಡೇರೆಯನ್ನ ಎರಡು ಭಾಗಗಳಾಗಿ ವಿಭಾಗಿಸಲು ಸುಂದರ ಪರದೆಯನ್ನು ಮಾಡಿದರು. ಒಂದು ಭಾಗ ಪವಿತ್ರ ಸ್ಥಳ ಮತ್ತು ಇನ್ನೊಂದು ಅತಿ ಪವಿತ್ರ ಸ್ಥಳ. ಅತಿ ಪವಿತ್ರ ಸ್ಥಳದಲ್ಲಿ ಒಪ್ಪಂದದ ಮಂಜೂಷ ಇತ್ತು. ಅದನ್ನು ಆಕೇಶಿಯ ಮರ ಮತ್ತು ಚಿನ್ನದಿಂದ ಮಾಡಿದ್ದರು. ಪವಿತ್ರ ಸ್ಥಳದಲ್ಲಿ ಚಿನ್ನದ ದೀಪಸ್ತಂಭ, ಮೇಜು ಮತ್ತು ಧೂಪ ಸುಡಲು ಧೂಪವೇದಿ ಇತ್ತು. ಪವಿತ್ರ ಡೇರೆಯ ಅಂಗಳದಲ್ಲಿ ತಾಮ್ರದ ಬೋಗುಣಿ ಮತ್ತು ದೊಡ್ಡ ಯಜ್ಞವೇದಿ ಇತ್ತು. ಒಪ್ಪಂದದ ಮಂಜೂಷ ‘ನಾವು ನೀನು ಹೇಳಿದೆಲ್ಲ ಕೇಳ್ತೀವಿ’ ಎಂದು ಯೆಹೋವನಿಗೆ ಕೊಟ್ಟ ಮಾತನ್ನು ಇಸ್ರಾಯೇಲ್ಯರಿಗೆ ನೆನಪಿಸುತ್ತಿತ್ತು. ಒಪ್ಪಂದ ಅಂದರೇನು ಎಂದು ನಿನಗೆ ಗೊತ್ತಾ? ಅದು ಒಂದು ವಿಶೇಷ ಮಾತು ಕೊಡೋದಾಗಿದೆ.
ಪವಿತ್ರ ಡೇರೆಯಲ್ಲಿ ಪುರೋಹಿತ ಸೇವೆ ಮಾಡಲು ಯೆಹೋವನು ಆರೋನ ಮತ್ತು ಅವನ ಪುತ್ರರನ್ನು ಆರಿಸಿದನು. ಅವರು ಪವಿತ್ರ ಡೇರೆಯನ್ನ ನೋಡಿಕೊಳ್ಳಬೇಕಿತ್ತು ಮತ್ತು ಯೆಹೋವನಿಗೆ ಬಲಿಗಳನ್ನು ಅರ್ಪಿಸಬೇಕಿತ್ತು. ಮಹಾ ಪುರೋಹಿತ ಆರೋನ ಮಾತ್ರ ಅತಿ ಪವಿತ್ರ ಸ್ಥಳಕ್ಕೆ ಹೋಗಬಹುದಿತ್ತು. ವರ್ಷಕ್ಕೆ ಒಂದು ಸಲ ಅವನು ಅತಿ ಪವಿತ್ರ ಸ್ಥಳಕ್ಕೆ ಹೋಗಿ ಅವನ ಪಾಪಗಳಿಗಾಗಿ, ಅವನ ಕುಟುಂಬದವರ ಪಾಪಗಳಿಗಾಗಿ ಮತ್ತು ಇಡೀ ಇಸ್ರಾಯೇಲ್ಯ ಜನಾಂಗದ ಪಾಪಗಳಿಗಾಗಿ ಬಲಿಗಳನ್ನು ಅರ್ಪಿಸಬೇಕಿತ್ತು.
ಈಜಿಪ್ಟನ್ನು ಬಿಟ್ಟುಬಂದ ಒಂದು ವರ್ಷದಲ್ಲಿ ಇಸ್ರಾಯೇಲ್ಯರು ಪವಿತ್ರ ಡೇರೆಯನ್ನ ಕಟ್ಟಿ ಮುಗಿಸಿದರು. ಈಗ ಅವರಿಗೆ ಯೆಹೋವನನ್ನು ಆರಾಧಿಸಲು ಒಂದು ಸ್ಥಳ ಇತ್ತು.
ಈ ಪವಿತ್ರ ಡೇರೆಯನ್ನ ಯೆಹೋವನು ಮೆಚ್ಚಿದನು. ಆತನು ಅದರ ಮೇಲೆ ಮೋಡವು ಕಾಣುವಂತೆ ಮಾಡಿದನು. ಮೋಡ ಪವಿತ್ರ ಡೇರೆಯನ್ನ ಮುಚ್ಚಿದ್ದಾಗ ಇಸ್ರಾಯೇಲ್ಯರು ತಾವಿದ್ದ ಸ್ಥಳದಲ್ಲೇ ಇರುತ್ತಿದ್ದರು. ಆದರೆ ಮೋಡವು ಪವಿತ್ರ ಡೇರೆಯನ್ನ ಬಿಟ್ಟು ಮೇಲಕ್ಕೆ ಹೋದಾಗ ಅಲ್ಲಿಂದ ಹೊರಡುವ ಸಮಯ ಬಂತು ಎಂದು ತಿಳಿದುಕೊಳ್ಳುತ್ತಿದ್ದರು. ಆಮೇಲೆ ಅವರು ಪವಿತ್ರ ಡೇರೆಯನ್ನ ಕಿತ್ತು ಮೋಡವನ್ನು ಹಿಂಬಾಲಿಸುತ್ತಿದ್ದರು.
“ಆಗ ಸಿಂಹಾಸನದಿಂದ ಒಂದು ದೊಡ್ಡ ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: ‘ನೋಡಿ, ದೇವರ ಡೇರೆ ಜನ್ರ ಜೊತೆ ಇದೆ. ಆತನು ಅವ್ರ ಜೊತೆ ವಾಸ ಮಾಡ್ತಾನೆ. ಅವರು ಆತನ ಜನ್ರಾಗಿ ಇರ್ತಾರೆ. ದೇವರೇ ಅವ್ರ ಜೊತೆ ಇರ್ತಾನೆ.’”—ಪ್ರಕಟನೆ 21:3