ಪಾಠ 75
ಯೇಸುವನ್ನು ಪಿಶಾಚನು ಪರೀಕ್ಷಿಸಿದನು
ಯೇಸು ದೀಕ್ಷಾಸ್ನಾನ ಪಡೆದ ಮೇಲೆ, ಪವಿತ್ರಶಕ್ತಿ ಅವನನ್ನು ಬರಡು ಪ್ರದೇಶಕ್ಕೆ ನಡೆಸಿತು. ಯೇಸು ನಲವತ್ತು ದಿನಗಳವರೆಗೆ ಏನೂ ತಿನ್ನಲಿಲ್ಲ, ಅವನಿಗೆ ತುಂಬಾ ಹಸಿವಾಯಿತು. ಆಗ ಪಿಶಾಚನು ಯೇಸುವನ್ನು ಪರೀಕ್ಷಿಸಲು ಬಂದನು. ಅವನು ಯೇಸುವಿಗೆ, ‘ನೀನು ನಿಜವಾಗಿ ದೇವರ ಮಗನಾಗಿದ್ರೆ ಈ ಕಲ್ಲುಗಳಿಗೆ ರೊಟ್ಟಿ ಆಗು ಅಂತ ಹೇಳು’ ಅಂದನು. ಆದರೆ ಯೇಸು ಪವಿತ್ರ ಗ್ರಂಥವನ್ನ ಉಪಯೋಗಿಸಿ, ‘ಬದುಕಲು ಕೇವಲ ಆಹಾರ ಅಷ್ಟೇ ಸಾಕಾಗಲ್ಲ. ಯೆಹೋವನು ಹೇಳುವ ಪ್ರತಿಯೊಂದು ಮಾತನ್ನು ಕೇಳಬೇಕು ಎಂದು ಬರೆದಿದೆ’ ಎಂದು ಉತ್ತರಿಸಿದನು.
ನಂತರ, ಪಿಶಾಚನು ಯೇಸುವಿಗೆ, ‘ನೀನು ನಿಜವಾಗಿ ದೇವರ ಮಗನಾಗಿದ್ರೆ ದೇವಾಲಯದ ಮೇಲಿಂದ ಕೆಳಕ್ಕೆ ಜಿಗಿ. ದೇವರು ತನ್ನ ದೂತರನ್ನು ಕಳುಹಿಸಿ ನಿನ್ನನ್ನು ಕಾಪಾಡುವನು ಎಂದು ಬರೆದಿದೆಯಲ್ಲಾ’ ಎಂದು ಹೇಳಿದನು. ಆದರೆ ಯೇಸು ಪುನಃ ಪವಿತ್ರ ಗ್ರಂಥವನ್ನು ಉಪಯೋಗಿಸಿ, ‘ಯೆಹೋವನನ್ನು ಪರೀಕ್ಷಿಸಬಾರದು ಎಂದು ಸಹ ಬರೆದಿದೆ’ ಅಂದನು.
ಬಳಿಕ, ಸೈತಾನನು ಎಲ್ಲಾ ಸಾಮ್ರಾಜ್ಯಗಳನ್ನೂ ಅವುಗಳ ಸಂಪತ್ತನ್ನೂ, ಮಹಿಮೆಯನ್ನೂ ತೋರಿಸಿ, ‘ನೀನು ನನಗೆ ಒಂದೇ ಒಂದು ಸಾರಿ ಆರಾಧನೆ ಮಾಡಿದರೆ ಈ ಎಲ್ಲಾ ಸಾಮ್ರಾಜ್ಯಗಳನ್ನು ಮತ್ತು ಸಂಪತ್ತನ್ನು ನಿನಗೆ ಕೊಡ್ತೀನಿ’ ಅಂದನು. ಆದರೆ ಯೇಸು ಅವನಿಗೆ, ‘ಸೈತಾನನೇ, ಇಲ್ಲಿಂದ ತೊಲಗಿ ಹೋಗು! ಯೆಹೋವನನ್ನು ಮಾತ್ರ ಆರಾಧಿಸಬೇಕು ಎಂದು ಬರೆದಿದೆ’ ಅಂದನು.
ಆಗ ಪಿಶಾಚನು ಅಲ್ಲಿಂದ ಹೋದನು ಮತ್ತು ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು. ಅಂದಿನಿಂದ ಯೇಸು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನು ಸಾರಿದನು. ಈ ಕೆಲಸಕ್ಕಾಗಿಯೇ ದೇವರು ಅವನನ್ನು ಭೂಮಿಗೆ ಕಳುಹಿಸಿದ್ದನು. ಯೇಸುವಿನ ಬೋಧನೆಯನ್ನು ಜನರು ಇಷ್ಟಪಟ್ಟರು. ಅವನು ಹೋದಲ್ಲೆಲ್ಲಾ ಅವರು ಅವನ ಹಿಂದೆ ಹೋದರು.
“ಅವನು [ಪಿಶಾಚ] ಸುಳ್ಳು ಹೇಳ್ತಾನೆ. ಯಾಕಂದ್ರೆ ಅವನ ಮನಸ್ಸು ತುಂಬ ಅದೇ ತುಂಬಿದೆ. ಅವನು ಸುಳ್ಳುಬುರುಕ. ಸುಳ್ಳನ್ನ ಹುಟ್ಟಿಸಿದವನೇ ಅವನು.”—ಯೋಹಾನ 8:44