ಪಾಠ 86
ಯೇಸು ಲಾಜರನಿಗೆ ಮತ್ತೆ ಜೀವ ಕೊಟ್ಟನು
ಯೇಸುವಿಗೆ ಬೇಥಾನ್ಯದಲ್ಲಿ ಮೂವರು ಆಪ್ತ ಸ್ನೇಹಿತರಿದ್ದರು. ಅವರು ಯಾರೆಂದರೆ ಲಾಜರ ಮತ್ತು ಅವನ ಇಬ್ಬರು ಸಹೋದರಿಯರಾದ ಮರಿಯ ಮತ್ತು ಮಾರ್ಥ. ಒಂದು ದಿನ, ಯೇಸು ಯೋರ್ದನಿನ ಆಚೆ ಪಕ್ಕದಲ್ಲಿದ್ದನು. ಆಗ ಮರಿಯ ಮತ್ತು ಮಾರ್ಥ ಯೇಸುವಿಗೆ, ‘ಲಾಜರನಿಗೆ ಹುಷಾರಿಲ್ಲ. ದಯವಿಟ್ಟು ಬೇಗ ಬನ್ನಿ!’ ಎಂಬ ತುರ್ತಿನ ಸಂದೇಶ ಕಳುಹಿಸಿದರು. ಆದರೆ ಯೇಸು ತಕ್ಷಣ ಹೋಗಲಿಲ್ಲ. ಅವನು ಇನ್ನೆರಡು ದಿನ ಅಲ್ಲೇ ಉಳಿದನು, ನಂತರ ಯೇಸು ಶಿಷ್ಯರಿಗೆ, ‘ಬೇಥಾನ್ಯಕ್ಕೆ ಹೋಗೋಣ ಬನ್ನಿ. ನಮ್ಮ ಗೆಳೆಯ ಲಾಜರ ನಿದ್ದೆ ಮಾಡ್ತಿದ್ದಾನೆ. ಅವನನ್ನ ಎಬ್ಬಿಸೋಕೆ ನಾನು ಹೋಗ್ತಾ ಇದ್ದೀನಿ’ ಎಂದನು. ಶಿಷ್ಯರು, ‘ಲಾಜರನು ನಿದ್ದೆ ಮಾಡಿದ್ರೆ ವಾಸಿ ಆಗಿಬಿಡ್ತಾನೆ’ ಎಂದರು. ಆಗ ಯೇಸು ಅವರಿಗೆ ಸ್ಪಷ್ಟವಾಗಿ, ‘ಲಾಜರನು ಸತ್ತುಹೋಗಿದ್ದಾನೆ’ ಅಂದನು.
ಯೇಸು ಬೇಥಾನ್ಯಕ್ಕೆ ಬಂದು ಮುಟ್ಟಿದಾಗ ಲಾಜರನನ್ನು ಸಮಾಧಿ ಮಾಡಿ ಈಗಾಗಲೇ ನಾಲ್ಕು ದಿನಗಳಾಗಿದ್ದವು. ಮಾರ್ಥ ಮತ್ತು ಮರಿಯಳನ್ನು ಸಮಾಧಾನ ಪಡಿಸಲು ಜನರು ಗುಂಪು ಬಂದಿತ್ತು. ಯೇಸು ಬಂದಿದ್ದಾನೆಂದು ಮಾರ್ಥ ಕೇಳಿದ ಕೂಡಲೇ, ಅವನನ್ನು ನೋಡಲು ಓಡೋಡಿ ಬಂದಳು. ಅವಳು ಯೇಸುವಿಗೆ, “ಪ್ರಭು, ನೀನು ಇಲ್ಲಿ ಇರ್ತಿದ್ರೆ ನನ್ನ ತಮ್ಮ ಸಾಯ್ತಿರಲಿಲ್ಲ.” ಅಂದಳು. ಯೇಸು ಅವಳಿಗೆ, “ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ” ನೀನು ಇದನ್ನು ನಂಬುತ್ತೀಯಾ ಮಾರ್ಥ?’ ಎಂದು ಕೇಳಿದನು. ಮಾರ್ಥಳು, “ಕೊನೇ ದಿನದಲ್ಲಿ ಸತ್ತವ್ರಿಗೆ ನೀನು ಮತ್ತೆ ಜೀವ ಕೊಡುವಾಗ ನನ್ನ ತಮ್ಮನೂ ಬರ್ತಾನೆ ಅಂತ ನಂಗೊತ್ತು” ಅಂದಳು. ಯೇಸು ಮಾರ್ಥಳಿಗೆ, “ಸತ್ತವ್ರನ್ನ ಬದುಕಿಸೋದೂ ಅವ್ರಿಗೆ ಜೀವ ಕೊಡೋದೂ ನಾನೇ” ಎಂದನು.
ನಂತರ ಮಾರ್ಥಳು ಮರಿಯಳ ಬಳಿಗೆ ಹೋಗಿ, “ಗುರು ಬಂದಿದ್ದಾನೆ” ಎಂದಳು. ಮರಿಯಳು ಯೇಸುವಿನ ಬಳಿಗೆ ಓಡೋಡಿ ಹೋದಳು, ಜನರ ಗುಂಪೂ ಅವಳನ್ನು ಹಿಂಬಾಲಿಸಿತು. ಅವಳು ಯೇಸುವಿನ ಕಾಲ ಹತ್ತಿರ ಬಿದ್ದು ಬಿಕ್ಕಿ ಬಿಕ್ಕಿ ಅಳುತ್ತ, “ಪ್ರಭು, ನೀನು ಇಲ್ಲಿ ಇರ್ತಿದ್ರೆ ತಮ್ಮ ಸಾಯ್ತಿರಲಿಲ್ಲ” ಎಂದಳು. ಮರಿಯಳು ಪಡುತ್ತಿದ್ದ ಸಂಕಟವನ್ನು ನೋಡಿ ಯೇಸು ಸಹ ಅತ್ತನು. ಇದನ್ನು ನೋಡಿದ ಜನರ ಗುಂಪು, “ಇವನಿಗೆ ಲಾಜರನ ಮೇಲೆ ಎಷ್ಟು ಪ್ರೀತಿ ನೋಡಿ!” ಎಂದರು. ಆದರೆ ಕೆಲವರು, ‘ಇವನು ತನ್ನ ಸ್ನೇಹಿತನನ್ನೇಕೆ ಕಾಪಾಡಲಿಲ್ಲ?’ ಅಂದುಕೊಂಡರು. ಯೇಸು ಮುಂದೆ ಏನು ಮಾಡಿದನು? ನೋಡೋಣ ಬನ್ನಿ.
ಯೇಸು ಸಮಾಧಿಯ ಹತ್ತಿರ ಹೋದನು. ಅದರ ಬಾಗಿಲಿಗೆ ಒಂದು ದೊಡ್ಡ ಕಲ್ಲನ್ನು ಮುಚ್ಚಲಾಗಿತ್ತು. “ಆ ಕಲ್ಲನ್ನ ಪಕ್ಕಕ್ಕೆ ಸರಿಸಿ” ಎಂದನು ಯೇಸು. ಮಾರ್ಥಳು ಯೇಸುವಿಗೆ, “ಪ್ರಭು, ಅವನು ಸತ್ತು ನಾಲ್ಕು ದಿನ ಆಗಿದೆ. ಈಗ ಅವನ ದೇಹ ವಾಸನೆ ಬರುತ್ತಿರುತ್ತೆ” ಎಂದಳು. ಆದರೂ ಅವರು ಕಲ್ಲನ್ನು ತೆಗೆದರು. ಆಗ ಯೇಸು, “ಅಪ್ಪಾ, ನನ್ನ ಪ್ರಾರ್ಥನೆ ಕೇಳಿದ್ದಕ್ಕೆ ತುಂಬ ಧನ್ಯವಾದ. ನೀನು ಯಾವಾಗ್ಲೂ ನನ್ನ ಪ್ರಾರ್ಥನೆ ಕೇಳ್ತೀಯ ಅಂತ ನಂಗೊತ್ತು. ಆದ್ರೆ ನೀನೇ ನನ್ನನ್ನ ಕಳಿಸಿದ್ದೀಯ ಅನ್ನೋ ನಂಬಿಕೆ ನನ್ನ ಸುತ್ತ ಇರೋ ಜನ್ರಿಗೆ ಬರಲಿ ಅಂತ ಹೀಗೆ ಹೇಳ್ತಾ ಇದ್ದೀನಿ” ಎಂದು ಪ್ರಾರ್ಥಿಸಿದನು. ನಂತರ, ಯೇಸು ಗಟ್ಟಿಯಾದ ಸ್ವರದಿಂದ, “ಲಾಜರ, ಎದ್ದು ಹೊರಗೆ ಬಾ” ಎಂದು ಕೂಗಿದನು. ಆಗೊಂದು ಅದ್ಭುತ ನಡೆಯಿತು. ಲಾಜರನು ಸಮಾಧಿಯಿಂದ ಹೊರಗೆ ಬಂದನು. ಅವನಿಗೆ ಸುತ್ತಿದ್ದ ಬಟ್ಟೆಯು ಇನ್ನೂ ಹಾಗೆಯೇ ಇತ್ತು. ಯೇಸು ಅಲ್ಲಿದ್ದವರಿಗೆ, “ಆ ಪಟ್ಟಿಗಳನ್ನ ಬಿಚ್ಚಿ, ಅವನು ನಡಿಲಿ” ಎಂದನು.
ಇದನ್ನು ನೋಡಿದ ಅನೇಕರು ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಕೆಲವರು ಫರಿಸಾಯರ ಬಳಿ ಹೋಗಿ ಎಲ್ಲಾ ಸಂಗತಿಗಳನ್ನು ತಿಳಿಸಿದರು. ಅಂದಿನಿಂದ ಫರಿಸಾಯರು ಯೇಸುವನ್ನು ಮತ್ತು ಲಾಜರನನ್ನು ಕೊಲ್ಲಲು ನೋಡುತ್ತಿದ್ದರು. ಹನ್ನೆರಡು ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೂತ ಯೂದ ರಹಸ್ಯವಾಗಿ ಫರಿಸಾಯರ ಹತ್ತಿರ ಹೋಗಿ, ‘ನಾನು ಯೇಸುವನ್ನು ಹಿಡುಕೊಟ್ರೆ ನೀವು ನನಗೆಷ್ಟು ಹಣ ಕೊಡುವಿರಿ?’ ಎಂದು ಕೇಳಿದ. ಅವರು ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡಲು ಒಪ್ಪಿಕೊಂಡರು. ಅಂದಿನಿಂದ ಯೂದನು ಯೇಸುವನ್ನು ಫರಿಸಾಯರಿಗೆ ಹಿಡಿದುಕೊಡುವ ಸಂದರ್ಭಕ್ಕಾಗಿ ಹುಡುಕುತ್ತಿದ್ದನು.
“ಸತ್ಯದೇವರು ನಮ್ಮನ್ನ ರಕ್ಷಿಸೋ ದೇವರಾಗಿದ್ದಾನೆ, ವಿಶ್ವದ ರಾಜ ಯೆಹೋವ ಸಾವಿಂದ ನಮ್ಮನ್ನ ತಪ್ಪಿಸ್ತಾನೆ.”—ಕೀರ್ತನೆ 68:20