ಕಷ್ಟಗಳಿಗೆ ಯಾರು ಕಾರಣ?
ಕಷ್ಟಗಳು ದೇವರಿಂದ ಬಂದಿಲ್ಲವಾದರೆ ಕಿತ್ತುತಿನ್ನುವ ಬಡತನ, ಆಹಾರದ ಕೊರತೆ, ಘೋರ ಯುದ್ಧಗಳು, ದೇಹಕ್ಕೆ ಶಾಶ್ವತ ಹಾನಿಮಾಡುವ ಕಾಯಿಲೆಗಳು, ನೈಸರ್ಗಿಕ ವಿಪತ್ತುಗಳಿಗೆ ಯಾರು ಕಾರಣ? ಮಾನವರ ಕಷ್ಟಗಳಿಗೆ ಇರುವ ಮೂರು ಮುಖ್ಯ ಕಾರಣಗಳನ್ನು ದೇವರ ವಾಕ್ಯವಾದ ಬೈಬಲ್ ತಿಳಿಸುತ್ತದೆ:
ಸ್ವಾರ್ಥ, ದುರಾಸೆ ಮತ್ತು ದ್ವೇಷ. ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಹಾನಿಯನ್ನುಂಟುಮಾಡಿದ್ದಾನೆ.’ (ಪ್ರಸಂಗಿ 8:9) ಹೆಚ್ಚಾಗಿ ಜನರ ಕಷ್ಟಗಳಿಗೆ ಕಾರಣ ಅಪರಿಪೂರ್ಣ, ಕ್ರೂರ ಅಥವಾ ಸ್ವಾರ್ಥಿ ಮಾನವರ ಕೃತ್ಯಗಳೇ.
ಕಾಲ ಮತ್ತು ಮುಂಗಾಣದ ಘಟನೆಗಳು. ಜನರು ಕಷ್ಟಗಳಿಗೆ ತುತ್ತಾಗಲು ಇನ್ನೊಂದು ಮುಖ್ಯ ಕಾರಣ, “ಕಾಲವೂ ಮುಂಗಾಣದ ಘಟನೆಯೂ” ಆಗಿದೆ. (ಪ್ರಸಂಗಿ 9:11, ನೂತನ ಲೋಕ ಭಾಷಾಂತರ) ಇದರರ್ಥ ಜನರು ಗೊತ್ತಿಲ್ಲದೆ ಅಪಾಯದ ಸ್ಥಳದಲ್ಲಿದ್ದರೆ ಅಪಘಾತಗಳಿಗೆ ಗುರಿಯಾಗುತ್ತಾರೆ ಅಥವಾ ಅಜಾಗರೂಕತೆ ಇಲ್ಲವೆ ತಪ್ಪಿನಿಂದಾಗಿ ಕಷ್ಟಗಳಿಗೆ ತುತ್ತಾಗುತ್ತಾರೆ.
ಲೋಕದ ದುಷ್ಟ ಅಧಿಪತಿ. ಮಾನವರ ಕಷ್ಟಗಳಿಗಿರುವ ಬಹು ಮುಖ್ಯ ಕಾರಣ ಏನೆಂದು ಬೈಬಲ್ ತಿಳಿಸುತ್ತದೆ. “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಅದು ಹೇಳುತ್ತದೆ. (1 ಯೋಹಾನ 5:19) ಆ ‘ಕೆಡುಕನು’ ಪಿಶಾಚನಾದ ಸೈತಾನನಾಗಿದ್ದಾನೆ. ಅವನು ಒಬ್ಬ ಶಕ್ತಿಶಾಲಿ ಜೀವಿಯಾಗಿದ್ದು ಆರಂಭದಲ್ಲಿ ದೇವದೂತನಾಗಿದ್ದ. ಆದರೆ ಅವನು “ಸತ್ಯದಲ್ಲಿ ನೆಲೆನಿಲ್ಲಲಿಲ್ಲ.” (ಯೋಹಾನ 8:44) ಇತರ ಅನೇಕ ದೇವದೂತರು ತಮ್ಮ ಸ್ವಾರ್ಥ ಆಸೆಗಳನ್ನು ಪೂರೈಸಲಿಕ್ಕಾಗಿ ಸೈತಾನನೊಂದಿಗೆ ಸೇರಿ ದೇವರ ವಿರುದ್ಧ ದಂಗೆ ಎದ್ದರು. ಹೀಗೆ ಅವರು ದೆವ್ವಗಳಾದರು ಅಂದರೆ ಸೈತಾನನ ದೂತರಾದರು. (ಆದಿಕಾಂಡ 6:1-5) ಆಗಿನಿಂದ ಸೈತಾನನೂ ಅವನ ದೆವ್ವಗಳೂ ಲೋಕದ ವ್ಯವಹಾರಗಳ ಮೇಲೆ ತುಂಬ ಕೆಟ್ಟ ಪ್ರಭಾವ ಬೀರುತ್ತಿದ್ದಾರೆ. ನಮ್ಮ ಈ ದಿನಗಳಲ್ಲಂತೂ ಅದು ಇನ್ನೂ ಹೆಚ್ಚಾಗಿದೆ. ಸೈತಾನನು ಈಗ ತುಂಬ ಕೋಪದಿಂದ “ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸುತ್ತಿ”ದ್ದಾನೆ. ಇದರಿಂದಾಗಿ “ಭೂಮಿಗೆ ಅಯ್ಯೋ” ಎನ್ನುವಂಥ ಪರಿಸ್ಥಿತಿ ಬಂದಿದೆ. (ಪ್ರಕಟನೆ 12:9, 12) ಸೈತಾನನು ಕ್ರೂರ ಸರ್ವಾಧಿಕಾರಿ ಎನ್ನುವುದು ಖಚಿತ. ಮಾನವರು ಕಷ್ಟ ಅನುಭವಿಸುವುದನ್ನು ನೋಡುವಾಗ ಅವನಿಗೆ ಎಲ್ಲಿಲ್ಲದ ತೃಪ್ತಿಯಾಗುತ್ತದೆ. ಹಾಗಾಗಿ, ಜನರ ಕಷ್ಟಗಳಿಗೆ ಅವನೇ ಕಾರಣ, ದೇವರಲ್ಲ.
ಯೋಚಿಸಿ: ಕಟುಕ, ಪೈಶಾಚಿಕ ಬುದ್ಧಿಯ ವ್ಯಕ್ತಿ ಮಾತ್ರ ಹೀಗೆ ಅಮಾಯಕ ಜನರಿಗೆ ಕಷ್ಟ ಕೊಡಲು ಸಾಧ್ಯ. ಆದರೆ, “ದೇವರು ಪ್ರೀತಿಯಾಗಿದ್ದಾನೆ” ಎನ್ನುತ್ತದೆ ಬೈಬಲ್. (1 ಯೋಹಾನ 4:8) ಆತನು ತುಂಬ ಪ್ರೀತಿಯ ದೇವರಾಗಿರುವುದರಿಂದ ‘ಕೆಟ್ಟದ್ದನ್ನು ಮಾಡುವ, ಅನ್ಯಾಯವನ್ನು ನಡಿಸುವ ಯೋಚನೆಯೂ’ ಆತನಿಗೆ ಬರುವುದಿಲ್ಲ.—ಯೋಬ 34:10.
ಆದರೂ ಸಹಜವಾಗಿಯೇ ನಿಮ್ಮ ಮನಸ್ಸಿಗೆ ಈ ಪ್ರಶ್ನೆ ಬರಬಹುದು: ‘ಸರ್ವಶಕ್ತ ದೇವರು ಎಲ್ಲಿಯವರೆಗೆ ಸೈತಾನನ ಈ ಕ್ರೂರ ಆಡಳಿತ ಮುಂದುವರಿಯುವಂತೆ ಬಿಡುತ್ತಾನೆ?’ ದೇವರು ಕೆಟ್ಟದ್ದನ್ನು ದ್ವೇಷಿಸುತ್ತಾನೆ ಮತ್ತು ನಾವು ಕಷ್ಟದಲ್ಲಿರುವಾಗ ಆತನಿಗೆ ನೋವಾಗುತ್ತದೆ ಎಂದು ಈಗಾಗಲೇ ಕಲಿತಿದ್ದೇವೆ. ಆತನ ವಾಕ್ಯ ಹೀಗೂ ಹೇಳುತ್ತದೆ: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ದೇವರಿಗೆ ನಮ್ಮ ಮೇಲೆ ಪ್ರೀತಿ ಇದೆ, ಜೊತೆಗೆ ಶಕ್ತಿಯೂ ಇದೆ. ಹಾಗಾಗಿ, ಆತನು ಬೇಗನೆ ಎಲ್ಲಾ ಕಷ್ಟ-ಅನ್ಯಾಯಗಳನ್ನು ತೆಗೆದುಹಾಕುತ್ತಾನೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ಲೇಖನ ಕೊಡಲಿದೆ.a
a ಇಷ್ಟೊಂದು ಕಷ್ಟ ಯಾಕಿದೆ ಅಂತ ತಿಳಿಯಲು ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 26ನೇ ಪಾಠ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.pr418.com./knನಲ್ಲಿ ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.