-
ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 15
ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲ
ಯೋಸೇಫನು ಜೈಲಿನಲ್ಲಿದ್ದಾಗ ಈಜಿಪ್ಟಿನ ರಾಜನಾದ ಫರೋಹನಿಗೆ ಎರಡು ಕನಸು ಬಿತ್ತು. ಅದರ ಅರ್ಥ ಏನು ಅಂತ ಯಾರಿಗೂ ಗೊತ್ತಾಗಲಿಲ್ಲ. ಆಗ ಫರೋಹನ ಸೇವಕನೊಬ್ಬ ‘ಇದರ ಅರ್ಥವನ್ನು ಯೋಸೇಫ ಬಿಡಿಸಿ ಹೇಳುತ್ತಾನೆ’ ಎಂದ. ತಕ್ಷಣ ಫರೋಹ ಯೋಸೇಫನನ್ನು ಕರೆಸಿದ.
‘ನನ್ನ ಕನಸಿನ ಅರ್ಥವನ್ನು ಹೇಳಬಲ್ಲೆಯಾ?’ ಎಂದು ಫರೋಹ ಕೇಳಿದ. ಆಗ ಯೋಸೇಫ, ‘ಈಜಿಪ್ಟಿನಲ್ಲಿ ಮುಂದಿನ ಏಳು ವರ್ಷ ಮಳೆ ಬೆಳೆ ಚೆನ್ನಾಗಿ ಆಗುತ್ತೆ. ಆದರೆ ಅದರ ನಂತರದ ಏಳು ವರ್ಷ ಭೀಕರ ಬರಗಾಲ ಬರುತ್ತೆ. ಹಾಗಾಗಿ ಒಬ್ಬ ಬುದ್ಧಿವಂತನನ್ನು ಆರಿಸಿ ಆಹಾರವನ್ನು ಕೂಡಿಸಿಟ್ಟರೆ ಬರಗಾಲದಲ್ಲಿ ಜನರು ಹೊಟ್ಟೆಗಿಲ್ಲದೇ ಸಾಯುವಂಥ ಪರಿಸ್ಥಿತಿ ಬರುವುದಿಲ್ಲ’ ಎಂದು ಹೇಳಿದ. ಇದನ್ನು ಕೇಳಿದ ಫರೋಹ ‘ನಾನು ನಿನ್ನನ್ನೇ ಆರಿಸಿದ್ದೇನೆ! ಈಜಿಪ್ಟಿನ ಉನ್ನತ ಅಧಿಕಾರಿಗಳಲ್ಲಿ ನೀನೇ ಎರಡನೆಯವನಾಗುವಿ!’ ಎಂದು ಹೇಳಿದ. ಯೋಸೇಫನಿಗೆ ಫರೋಹನ ಕನಸಿನ ಅರ್ಥ ಹೇಗೆ ಗೊತ್ತಾಯಿತು? ಯೋಸೇಫನಿಗೆ ಯೆಹೋವನು ಸಹಾಯ ಮಾಡಿದನು.
ಮುಂದಿನ ಏಳು ವರ್ಷಗಳಲ್ಲಿ ಯೋಸೇಫ ದವಸಧಾನ್ಯಗಳನ್ನು ಕೂಡಿಸಿಟ್ಟ. ಆಮೇಲೆ ಯೋಸೇಫ ಹೇಳಿದಂತೆ ಭೂಮಿಯ ಎಲ್ಲಾ ಕಡೆ ಬರಗಾಲ ಬಂದೇ ಬಿಟ್ಟಿತು. ಎಲ್ಲಾ ಕಡೆಯಿಂದ ಜನರು ಧಾನ್ಯಗಳನ್ನು ಕೊಂಡುಕೊಳ್ಳಲು ಯೋಸೇಫನ ಹತ್ತಿರ ಹೋಗುತ್ತಿದ್ದರು. ಈಜಿಪ್ಟಿನಲ್ಲಿ ಆಹಾರ ಸಿಗುತ್ತೆ ಎಂದು ಯೋಸೇಫನ ಅಪ್ಪ ಯಾಕೋಬನಿಗೆ ಗೊತ್ತಾದಾಗ ತನ್ನ ಹತ್ತು ಮಕ್ಕಳನ್ನು ಅಲ್ಲಿಗೆ ಕಳುಹಿಸಿದ.
ಯಾಕೋಬನ ಮಕ್ಕಳು ಯೋಸೇಫನ ಹತ್ತಿರ ಹೋದರು. ಅವರನ್ನು ನೋಡಿದ ತಕ್ಷಣ ಯೋಸೇಫ ಅವರ ಗುರುತು ಹಿಡಿದ. ಆದರೆ ಅಣ್ಣಂದಿರಿಗೆ ಅವನು ಯೋಸೇಫ ಎಂದು ಗೊತ್ತಾಗಲಿಲ್ಲ. ಅವರೆಲ್ಲರು ಯೋಸೇಫನಿಗೆ ಅಡ್ಡಬೀಳುತ್ತಾರೆ. ಆಗ ಯೋಸೇಫನಿಗೆ ಚಿಕ್ಕ ವಯಸ್ಸಿನಲ್ಲಿ ಕಂಡ ಕನಸು ನೆನಪಿಗೆ ಬರುತ್ತೆ. ಆದರೆ ತನ್ನ ಅಣ್ಣಂದಿರು ಬದಲಾಗಿದ್ದಾರಾ ಎಂದು ತಿಳಿದುಕೊಳ್ಳಬೇಕಿತ್ತು. ಅದಕ್ಕಾಗಿ ಅವನು ‘ನಮ್ಮ ದೇಶದ ರಹಸ್ಯಗಳನ್ನು ತಿಳಿದುಕೊಳ್ಳಲು ಬಂದಿರುವ ಗೂಢಾಚಾರರು ನೀವು’ ಎಂದು ಹೇಳುತ್ತಾನೆ. ಅದಕ್ಕೆ ಅವರು ‘ಇಲ್ಲ ಇಲ್ಲ! ನಾವು ಕಾನಾನ್ ದೇಶದಿಂದ ಬಂದಿದ್ದೇವೆ. ನಾವು 12 ಜನ ಅಣ್ಣತಮ್ಮಂದಿರು. ಅದರಲ್ಲಿ ಒಬ್ಬ ಸತ್ತು ಹೋದ. ಕೊನೆಯವನು ತಂದೆ ಜೊತೆ ಮನೆಯಲ್ಲಿದ್ದಾನೆ’ ಎಂದರು. ಆಗ ಯೋಸೇಫ ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿ. ಆಗ ನಾನು ನಿಮ್ಮನ್ನು ನಂಬುತ್ತೇನೆ’ ಅಂದನು. ಅವರೆಲ್ಲರು ತಮ್ಮ ತಂದೆಯ ಬಳಿಗೆ ಹೋದರು.
ದವಸಧಾನ್ಯ ಖಾಲಿ ಆದಾಗ ಯಾಕೋಬ ತನ್ನ ಮಕ್ಕಳನ್ನು ಮತ್ತೆ ಈಜಿಪ್ಟಿಗೆ ಕಳುಹಿಸಿದ. ಈ ಬಾರಿ ಅವರು, ಕೊನೆಯ ತಮ್ಮ ಬೆನ್ಯಾಮೀನನನ್ನು ಕರೆದುಕೊಂಡು ಹೋದರು. ಯೋಸೇಫ ತನ್ನ ಅಣ್ಣಂದಿರನ್ನು ಪರೀಕ್ಷಿಸಲು ತನ್ನ ಬೆಳ್ಳಿ ಲೋಟವನ್ನು ತಾನೇ ಬೆನ್ಯಾಮೀನನ ಚೀಲದಲ್ಲಿ ಹಾಕಿ ಅವರ ಮೇಲೆ ಕಳ್ಳತನದ ಆರೋಪ ಹಾಕಿದನು. ಯೋಸೇಫನ ಸೇವಕರಿಗೆ ಆ ಲೋಟ ಬೆನ್ಯಾಮೀನನ ಚೀಲದಲ್ಲಿ ಸಿಗುತ್ತದೆ. ಆಗ ಅಣ್ಣಂದಿರಿಗೆ ಭಯದಿಂದ ದಿಕ್ಕೇ ತೋಚಲಿಲ್ಲ. ಅವರು ಯೋಸೇಫನ ಹತ್ತಿರ ಹೋಗಿ ‘ನಮಗೆ ಬೇಕಾದರೆ ಶಿಕ್ಷೆ ಕೊಡಿ. ಆದರೆ ದಯವಿಟ್ಟು ನಮ್ಮ ತಮ್ಮನನ್ನು ಬಿಟ್ಟುಬಿಡಿ’ ಎಂದು ಬೇಡಿಕೊಂಡರು.
ಆಗ ತನ್ನ ಅಣ್ಣಂದಿರು ಬದಲಾಗಿದ್ದಾರೆ ಎಂದು ಯೋಸೇಫನಿಗೆ ಗೊತ್ತಾಯಿತು. ಅವನಿಗೆ ದುಃಖ ತಡೆದುಕೊಳ್ಳಲು ಆಗದೇ ಜೋರಾಗಿ ಅಳಲು ಶುರುಮಾಡಿದನು. ಆಮೇಲೆ ‘ನಾನೇ ನಿಮ್ಮ ತಮ್ಮ ಯೋಸೇಫ. ತಂದೆ ಇನ್ನೂ ಇದ್ದಾರಾ?’ ಅಂತ ಕೇಳಿದ. ಈ ಮಾತನ್ನು ಕೇಳಿದಾಗ ಅವನ ಅಣ್ಣಂದಿರಿಗೆ ಆಶ್ಚರ್ಯವೋ ಆಶ್ಚರ್ಯ! ನಂತರ ಯೋಸೇಫ ‘ನೀವು ನನ್ನನ್ನ ಮಾರಿದ್ದಕ್ಕೆ ಬೇಜಾರು ಮಾಡ್ಕೊಬೇಡಿ. ನಮ್ಮ ಜೀವ ಉಳಿಸೋಕೆ ದೇವರೇ ನನ್ನನ್ನ ಇಲ್ಲಿಗೆ ಕಳಿಸಿದ್ದಾನೆ. ಬೇಗ ಹೋಗಿ ತಂದೆಯನ್ನ ಕರ್ಕೊಂಡು ಬನ್ನಿ’ ಎಂದನು.
ಈ ಸಂತೋಷದ ಸುದ್ದಿಯನ್ನು ಅವರು ಬೇಗ ಹೋಗಿ ತಮ್ಮ ತಂದೆಗೆ ತಿಳಿಸಿ ಅವನನ್ನು ಈಜಿಪ್ಟಿಗೆ ಕರೆದುಕೊಂಡು ಬಂದರು. ವರ್ಷಾನುಗಟ್ಟಲೆ ದೂರವಿದ್ದ ತಂದೆ-ಮಗ ಕೊನೆಗೂ ಒಂದಾದರು.
“ನೀವು ಬೇರೆಯವರ ತಪ್ಪನ್ನ ಕ್ಷಮಿಸಿಲ್ಲ ಅಂದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆನೂ ನಿಮ್ಮನ್ನ ಕ್ಷಮಿಸಲ್ಲ.”—ಮತ್ತಾಯ 6:15
-
-
ಯೋಬ ಯಾರು?ಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 16
ಯೋಬ ಯಾರು?
ಊಚ್ ದೇಶದಲ್ಲಿ ಯೆಹೋವನನ್ನು ಆರಾಧಿಸುತ್ತಿದ್ದ ಒಬ್ಬ ವ್ಯಕ್ತಿ ಇದ್ದ. ಅವನೇ ಯೋಬ. ಅವನಿಗೆ ದೊಡ್ಡ ಕುಟುಂಬ, ತುಂಬ ಆಸ್ತಿ-ಪಾಸ್ತಿ ಇತ್ತು. ಅವನು ತುಂಬ ಒಳ್ಳೆಯವನು. ಬಡವರಿಗೆ, ಗಂಡ ತೀರಿಹೋಗಿರುವ ಸ್ತ್ರೀಯರಿಗೆ, ಅಪ್ಪ-ಅಮ್ಮ ಇಲ್ಲದ ಮಕ್ಕಳಿಗೆ ಸಹಾಯ ಮಾಡುತ್ತಿದ್ದ. ಯಾವುದು ಸರಿನೋ ಅದನ್ನೇ ಮಾಡುತ್ತಿದ್ದ. ಹಾಗಂತ ಅವನಿಗೆ ಕಷ್ಟಗಳೇ ಬರಲಿಲ್ಲವಾ?
ಸೈತಾನನು ಯೋಬನನ್ನು ಗಮನಿಸುತ್ತಿದ್ದ. ಇದು ಯೋಬನಿಗೆ ಗೊತ್ತಿರಲಿಲ್ಲ. ಒಮ್ಮೆ ಯೆಹೋವನು ಸೈತಾನನಿಗೆ ‘ನನ್ನ ಸೇವಕನಾದ ಯೋಬನನ್ನ ಗಮನಿಸಿದ್ಯಾ? ಅವನ ಹಾಗೆ ಭೂಮಿ ಮೇಲೆ ಬೇರೆ ಯಾರೂ ಇಲ್ಲ. ಅವನು ನನ್ನ ಮಾತು ಕೇಳುತ್ತಾನೆ ಮತ್ತು ಸರಿಯಾಗಿರೋದನ್ನೇ ಮಾಡುತ್ತಾನೆ’ ಅಂದನು. ಅದಕ್ಕೆ ಸೈತಾನ ‘ಯೋಬ ನಿನಗೆ ಯಾಕೆ ವಿಧೇಯತೆ ತೋರಿಸುತ್ತಾನೆ ಗೊತ್ತಾ? ನೀನು ಅವನಿಗೆ ಎಲ್ಲಾ ಕೊಟ್ಟಿದ್ದೀಯಾ. ಬೇಕಾದಷ್ಟು ಆಳು-ಕಾಳು, ಆಸ್ತಿ-ಪಾಸ್ತಿ ಕೊಟ್ಟು ಆಶೀರ್ವದಿಸಿದ್ದೀಯ. ಅದನ್ನೆಲ್ಲಾ ಕಿತ್ಕೋ, ನಿನ್ನನ್ನು ಆರಾಧಿಸೋದನ್ನು ಬಿಟ್ಟುಬಿಡುತ್ತಾನೆ’ ಎಂದನು. ಆಗ ಯೆಹೋವನು ‘ಸರಿ ಹಾಗಾದ್ರೆ, ನೀನು ಅವನನ್ನು ಪರೀಕ್ಷೆ ಮಾಡಬಹುದು. ಆದರೆ ಅವನ ಜೀವ ಮಾತ್ರ ತೆಗೆಯಬಾರದು’ ಎಂದನು. ಸೈತಾನ ಯೋಬನನ್ನು ಪರೀಕ್ಷೆ ಮಾಡಲು ಯೆಹೋವನು ಯಾಕೆ ಬಿಟ್ಟ ಗೊತ್ತಾ? ಯಾಕೆಂದರೆ ಯೋಬ ತನಗೆ ನಂಬಿಗಸ್ತನಾಗಿ ಉಳಿಯುತ್ತಾನೆ ಎಂದು ಯೆಹೋವನಿಗೆ ಭರವಸೆ ಇತ್ತು.
ಸೈತಾನ ಯೋಬನ ಮೇಲೆ ಕಷ್ಟಗಳ ಸುರಿಮಳೆಯನ್ನೇ ಸುರಿಸಿದ. ಮೊದಲು ಶೆಬದವರು ಎಂಬ ಹೆಸರುಳ್ಳ ಕಳ್ಳರ ಗುಂಪನ್ನು ಕಳುಹಿಸಿ ಯೋಬನ ದನಕತ್ತೆಗಳನ್ನು ಕದಿಯುವ ಹಾಗೆ ಮಾಡಿದ. ನಂತರ ಬೆಂಕಿ ಬಿದ್ದು ಯೋಬನ ಕುರಿಗಳೆಲ್ಲಾ ನಾಶವಾದವು. ಆಮೇಲೆ ಕಸ್ದೀಯರು ಎಂಬ ಹೆಸರುಳ್ಳ ಇನ್ನೊಂದು ಗುಂಪಿನವರು ಅವನ ಒಂಟೆಗಳನ್ನು ಕಳ್ಳತನ ಮಾಡಿದರು. ಅವುಗಳನ್ನು ನೋಡಿಕೊಳ್ಳುತ್ತಿದ್ದ ಆಳುಗಳನ್ನೂ ಕೊಂದರು. ಆಮೇಲೆ ಇನ್ನೊಂದು ದೊಡ್ಡ ವಿಪತ್ತು ಕಾದಿತ್ತು. ಯೋಬನ ಮಕ್ಕಳೆಲ್ಲ ಒಂದು ಮನೆಯಲ್ಲಿ ಊಟ ಮಾಡ್ತಿದ್ದರು. ಇದ್ದಕ್ಕಿದ್ದಂತೆ ಆ ಮನೆ ಕುಸಿದು ಬಿದ್ದು ಅವರೆಲ್ಲರೂ ಸತ್ತುಹೋದರು. ಇದನ್ನು ಕೇಳಿ ಯೋಬನ ಎದೆ ಒಡೆದುಹೋಯಿತು. ಇಷ್ಟೆಲ್ಲಾ ಆದರೂ ಯೋಬ ಯೆಹೋವನನ್ನು ಆರಾಧಿಸೋದನ್ನು ಬಿಡಲೇ ಇಲ್ಲ.
ಇಷ್ಟಕ್ಕೇ ಸೈತಾನ ಸುಮ್ಮನಾಗಲಿಲ್ಲ. ಯೋಬನ ಮೈತುಂಬ ಹುಣ್ಣಾಗುವ ಹಾಗೆ ಮಾಡಿದ. ಯೋಬನಿಗೆ ತುಂಬಾ ನೋವಾಗುತ್ತಿತ್ತು. ತನಗೆ ಯಾಕೆ ಇಷ್ಟೊಂದು ಕಷ್ಟ ಬರುತ್ತಿದೆ ಅಂತ ಅವನಿಗೆ ಗೊತ್ತಿರಲಿಲ್ಲ. ಆದರೂ ಯೋಬ ಯೆಹೋವನನ್ನು ಆರಾಧಿಸೋದನ್ನು ಬಿಡಲಿಲ್ಲ. ಯೆಹೋವನು ಇದನ್ನೆಲ್ಲಾ ನೋಡಿ ತುಂಬ ಖುಷಿ ಪಟ್ಟನು.
ನಂತರ ಸೈತಾನ ಯೋಬನನ್ನು ಪರೀಕ್ಷಿಸಲು ಮೂವರನ್ನು ಕಳುಹಿಸಿದ. ಅವರು ಯೋಬನಿಗೆ ‘ನೀನು ಏನೋ ತಪ್ಪು ಮಾಡಿ ಅದನ್ನು ಮುಚ್ಚಿಟ್ಟಿದ್ದೀಯಾ. ಅದಕ್ಕೆ ದೇವರು ನಿನಗೆ ಹೀಗೆ ಶಿಕ್ಷೆ ಕೊಡುತ್ತಿದ್ದಾನೆ’ ಅಂದರು. ಆಗ ಯೋಬ ‘ನಾನು ಯಾವ ತಪ್ಪೂ ಮಾಡಿಲ್ಲ’ ಅಂದ. ಆದರೆ ಆಮೇಲೆ ಯೋಬನಿಗೂ ಯೆಹೋವನೇ ಈ ಕಷ್ಟಗಳನ್ನು ಕೊಡುತ್ತಿರಬಹುದು ಅಂತ ಅನಿಸಲು ಶುರುವಾಯಿತು. ಆದ್ದರಿಂದ ಯೋಬ ಯೆಹೋವನು ನನಗೆ ಅನ್ಯಾಯ ಮಾಡುತ್ತಿದ್ದಾನೆ ಎಂದ.
ಇವರೆಲ್ಲರ ಮಾತುಕತೆನಾ ಯುವ ಎಲೀಹು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ. ಕೊನೆಗೆ ಎಲೀಹು ಅವರಿಗೆ ‘ನೀವೆಲ್ಲರು ಹೇಳಿದ್ದು ತಪ್ಪು. ಯೆಹೋವನು ತುಂಬ ಒಳ್ಳೆಯವನು. ಆತನು ಯಾವತ್ತೂ ಕೆಟ್ಟದ್ದನ್ನು ಮಾಡಲ್ಲ. ಆತನು ಎಲ್ಲವನ್ನು ನೋಡುತ್ತಿರುತ್ತಾನೆ. ಜನರು ಕಷ್ಟದಿಂದ ಹೊರಗೆ ಬರಲು ಸಹಾಯ ಮಾಡುತ್ತಾನೆ’ ಎಂದ.
ಆಮೇಲೆ ಯೆಹೋವನು ಯೋಬನಿಗೆ, ‘ನಾನು ಆಕಾಶ-ಭೂಮಿಯನ್ನು ಸೃಷ್ಟಿಮಾಡಿದಾಗ ನೀನು ಎಲ್ಲಿದ್ದೆ? ನನ್ನ ನ್ಯಾಯವನ್ನೇ ನೀನು ಪ್ರಶ್ನಿಸ್ತೀಯಾ? ನಿನ್ನ ಕಷ್ಟಗಳಿಗೆ ಕಾರಣ ಏನಂತ ಸರಿಯಾಗಿ ತಿಳುಕೊಳ್ಳದೆ ನೀನು ಮಾತಾಡುತ್ತಿದ್ದೀಯಾ’ ಎಂದನು. ಆಗ ಯೋಬ ತನ್ನ ತಪ್ಪನ್ನು ಒಪ್ಪಿಕೊಂಡು ‘ನಾನು ಯೋಚ್ನೆ ಮಾಡದೆ ಮಾತಾಡಿಬಿಟ್ಟೆ. ನಾನು ಇಷ್ಟು ದಿನ ಬರೀ ನಿನ್ನ ಬಗ್ಗೆ ಕಿವಿಯಾರೆ ಕೇಳಿಸ್ಕೊಂಡಿದ್ದೆ, ಆದ್ರೆ ಈಗ ಕಣ್ಣಾರೆ ನೋಡಿದ್ದೀನಿ. ನಿನ್ನ ಕೈಯಲ್ಲಿ ಆಗದೇ ಇರೋದು ಯಾವುದೂ ಇಲ್ಲ. ದಯವಿಟ್ಟು ನನ್ನನ್ನು ಕ್ಷಮಿಸು’ ಎಂದು ಬೇಡಿಕೊಂಡ.
ಪರೀಕ್ಷೆಗಳ ನಂತರ ಯೆಹೋವನು ಯೋಬನ ಕಾಯಿಲೆ ವಾಸಿಮಾಡಿದ. ಕಷ್ಟ ಬಂದಾಗಲೂ ಯೋಬ ದೇವರ ಮಾತು ಕೇಳಿದ್ದರಿಂದ ಅವನಿಗೆ ಹೆಚ್ಚು ಆಶೀರ್ವಾದ ಸಿಕ್ಕಿತು. ಆಮೇಲೆ ಯೋಬ ಅನೇಕ ವರ್ಷ ಜೀವಿಸಿದ. ಕಷ್ಟ ಬಂದಾಗ ಯೋಬನಂತೆ ನೀನೂ ಯೆಹೋವನನ್ನೇ ಆರಾಧಿಸುತ್ತೀಯಾ?
“ಯೋಬ ತೋರಿಸಿದ ತಾಳ್ಮೆ ಬಗ್ಗೆ ನೀವು ಕೇಳಿಸ್ಕೊಂಡಿದ್ದೀರ. ಯೆಹೋವ ಅವನಿಗೆ ಎಷ್ಟೆಲ್ಲ ಆಶೀರ್ವಾದ ಮಾಡಿದನು ಅಂತ ನಿಮಗೆ ಗೊತ್ತು.”—ಯಾಕೋಬ 5:11
-