-
ಒಬ್ಬ ಆಳು ದೇವರಿಗೆ ವಿಧೇಯನಾದಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 14
ಒಬ್ಬ ಆಳು ದೇವರಿಗೆ ವಿಧೇಯನಾದ
ಯೋಸೇಫ ಯಾಕೋಬನ ಹನ್ನೊಂದನೇ ಮಗನಾಗಿದ್ದನು. ಅವನು ಯಾಕೋಬನ ಅಚ್ಚುಮೆಚ್ಚಿನ ಮಗ. ಇದರಿಂದ ಉಳಿದ ಹತ್ತು ಅಣ್ಣಂದಿರಿಗೆ ಹೇಗನಿಸಿತು? ಅವರಿಗೆ ಯೋಸೇಫನ ಮೇಲೆ ಹೊಟ್ಟೆಕಿಚ್ಚಾಯಿತು. ಅವರು ಅವನನ್ನು ದ್ವೇಷಿಸಲು ಶುರುಮಾಡಿದರು. ಒಂದಿನ ಯೋಸೇಫನಿಗೆ ಕೆಲವು ವಿಚಿತ್ರವಾದ ಕನಸುಗಳು ಬಿದ್ದವು. ಆ ಕನಸನ್ನು ಅವನು ಅಣ್ಣಂದಿರಿಗೆ ಹೇಳಿದ. ಅದನ್ನು ಅವರು ತಪ್ಪಾಗಿ ಅರ್ಥಮಾಡಿಕೊಂಡರು. ಅಂದರೆ ಅವರೆಲ್ಲರೂ ಒಂದಿನ ಯೋಸೇಫನ ಕಾಲಿಗೆ ಅಡ್ಡಬೀಳುತ್ತಾರೆ ಅಂತ ಅಂದುಕೊಂಡರು. ಇದರಿಂದ ಅವರು ಯೋಸೇಫನನ್ನು ಇನ್ನಷ್ಟು ಹೆಚ್ಚು ದ್ವೇಷಿಸಿದರು!
ಒಂದಿನ ಯೋಸೇಫನ ಅಣ್ಣಂದಿರು ಶೆಕೆಮ್ ಎಂಬ ಊರಿಗೆ ಕುರಿಮೇಯಿಸಲು ಹೋಗಿದ್ದರು. ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬರಲು ಯಾಕೋಬ ಯೋಸೇಫನನ್ನು ಕಳುಹಿಸಿದ. ದೂರದಲ್ಲಿ ಬರುತ್ತಿದ್ದ ಯೋಸೇಫನನ್ನು ನೋಡಿ ಅವನ ಅಣ್ಣಂದಿರು ‘ಅಲ್ಲಿ ನೋಡು, ಕನಸುಗಾರ ಬರ್ತಿದ್ದಾನೆ. ಬನ್ನಿ, ಅವನನ್ನ ಸಾಯಿಸೋಣ!’ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. ನಂತರ ಅವರು ಅವನನ್ನು ಎಳೆದುಕೊಂಡು ಬಂದು ಆಳವಾದ ಗುಂಡಿಗೆ ಹಾಕಿದರು. ಆದರೆ ಅಣ್ಣಂದಿರಲ್ಲಿ ಒಬ್ಬನಾದ ಯೆಹೂದನು ‘ಅವನನ್ನು ಸಾಯಿಸಬೇಡಿ! ಅದರ ಬದಲು ಅವನನ್ನು ದಾಸನಾಗಿ ಮಾರೋಣ’ ಎಂದನು. ಅವರು ಯೋಸೇಫನನ್ನು ಈಜಿಪ್ಟಿಗೆ ಹೋಗುತ್ತಿದ್ದ ಮಿದ್ಯಾನಿನ ವ್ಯಾಪಾರಿಗಳಿಗೆ ಮಾರಿ ಅವರಿಂದ 20 ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡರು.
ನಂತರ ಯೋಸೇಫನ ಅಣ್ಣಂದಿರು ಅವನ ಬಟ್ಟೆಯನ್ನು ಆಡಿನ ರಕ್ತದಲ್ಲಿ ಅದ್ದಿ ತಮ್ಮ ತಂದೆಗೆ ಕಳುಹಿಸಿದರು. ಅದನ್ನು ತಂದವರು ‘ಇದು ನಿನ್ನ ಮಗನ ಅಂಗಿ ಅಲ್ವಾ?’ ಅಂದರು. ಅದನ್ನು ನೋಡಿ ಕಾಡು ಪ್ರಾಣಿಯೊಂದು ಯೋಸೇಫನನ್ನು ಕೊಂದಿರಬೇಕು ಎಂದು ಯಾಕೋಬ ಅಂದುಕೊಂಡನು. ಅವನ ಎದೆ ಒಡೆದುಹೋಯಿತು. ಯಾರು ಏನೇ ಹೇಳಿದರೂ ಅವನಿಗೆ ಸಮಾಧಾನವಾಗಲಿಲ್ಲ.
ಈಜಿಪ್ಟಿನಲ್ಲಿ ಯೋಸೇಫನನ್ನು ಒಬ್ಬ ಉನ್ನತ ಅಧಿಕಾರಿಯಾದ ಪೋಟೀಫರನಿಗೆ ದಾಸನಾಗಿ ಮಾರಲಾಯಿತು. ಆದರೆ ಯೆಹೋವನು ಯೋಸೇಫನ ಜೊತೆ ಇದ್ದನು. ಯೋಸೇಫ ಕಷ್ಟಪಟ್ಟು ಕೆಲಸಮಾಡುವುದನ್ನು ಹಾಗೂ ಅವನ ನಂಬಿಗಸ್ತಿಕೆಯನ್ನು ಪೋಟೀಫರ ಗಮನಿಸಿದ. ಆದ್ದರಿಂದ ಯೋಸೇಫನಿಗೆ ತನ್ನ ಇಡೀ ಮನೆಯ ಜವಾಬ್ದಾರಿಯನ್ನು ವಹಿಸಿದ.
ಯೋಸೇಫನ ಸೌಂದರ್ಯ ಹಾಗೂ ಮೈಕಟ್ಟನ್ನು ಗಮನಿಸಿದ ಪೋಟೀಫರನ ಹೆಂಡತಿ ತನ್ನ ಜೊತೆ ಮಲಗುವಂತೆ ಅವನನ್ನು ಯಾವಾಗಲೂ ಪೀಡಿಸುತ್ತಿದ್ದಳು. ಯೋಸೇಫ ಏನು ಮಾಡಿದ? ಯೋಸೇಫ ಅದನ್ನು ನಿರಾಕರಿಸಿ ‘ಇಲ್ಲ! ಅದು ಮಹಾಪಾಪ! ಧಣಿ ನನ್ನ ನಂಬಿ ಎಲ್ಲವನ್ನ ನನ್ನ ಕೈಗೆ ಕೊಟ್ಟಿದ್ದಾನೆ. ಆದ್ರೆ ನೀನು ಅವನ ಹೆಂಡತಿ. ಈ ಮಹಾ ಕೆಟ್ಟ ಕೆಲಸ ಮಾಡಿ ದೇವರ ವಿರುದ್ಧ ಪಾಪ ಮಾಡೋಕೆ ನನ್ನಿಂದ ಸಾಧ್ಯನೇ ಇಲ್ಲ!’ ಎಂದನು.
ಒಂದಿನ ಪೋಟೀಫರನ ಹೆಂಡತಿ ಅವಳೊಂದಿಗೆ ಮಲಗಲು ಯೋಸೇಫನನ್ನು ತುಂಬ ಒತ್ತಾಯ ಮಾಡಿದಳು. ಅವಳು ಯೋಸೇಫನ ಬಟ್ಟೆಯನ್ನು ಹಿಡಿದು ಎಳೆದಾಗ ಅವನು ಅಲ್ಲಿಂದ ಓಡಿಹೋದ. ಪೋಟೀಫರ ಮನೆಗೆ ಬಂದಾಗ ಅವಳು ‘ಯೋಸೇಫ ನನ್ನನ್ನ ಕೆಡಿಸೋಕೆ ಬಂದ’ ಅಂದಳು. ಅವಳು ಸುಳ್ಳು ಹೇಳಿದಳು. ಇದನ್ನು ಕೇಳಿದಾಗ ಪೋಟೀಫರ ಕೋಪಗೊಂಡು ಯೋಸೇಫನನ್ನು ಜೈಲಿಗೆ ಹಾಕಿಸಿದ. ಆದರೆ ಯೆಹೋವನು ಯೋಸೇಫನನ್ನು ಮರೆಯಲಿಲ್ಲ.
“ಹಾಗಾಗಿ ತುಂಬ ಶಕ್ತಿ ಇರೋ ದೇವರ ಕೈಕೆಳಗೆ ನಿಮ್ಮನ್ನ ತಗ್ಗಿಸ್ಕೊಳ್ಳಿ. ಆಗ ತಕ್ಕ ಸಮಯದಲ್ಲಿ ಆತನು ನಿಮ್ಮನ್ನ ಮೇಲೆ ಎತ್ತುತ್ತಾನೆ.”—1 ಪೇತ್ರ 5:6
-
-
ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 15
ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲ
ಯೋಸೇಫನು ಜೈಲಿನಲ್ಲಿದ್ದಾಗ ಈಜಿಪ್ಟಿನ ರಾಜನಾದ ಫರೋಹನಿಗೆ ಎರಡು ಕನಸು ಬಿತ್ತು. ಅದರ ಅರ್ಥ ಏನು ಅಂತ ಯಾರಿಗೂ ಗೊತ್ತಾಗಲಿಲ್ಲ. ಆಗ ಫರೋಹನ ಸೇವಕನೊಬ್ಬ ‘ಇದರ ಅರ್ಥವನ್ನು ಯೋಸೇಫ ಬಿಡಿಸಿ ಹೇಳುತ್ತಾನೆ’ ಎಂದ. ತಕ್ಷಣ ಫರೋಹ ಯೋಸೇಫನನ್ನು ಕರೆಸಿದ.
‘ನನ್ನ ಕನಸಿನ ಅರ್ಥವನ್ನು ಹೇಳಬಲ್ಲೆಯಾ?’ ಎಂದು ಫರೋಹ ಕೇಳಿದ. ಆಗ ಯೋಸೇಫ, ‘ಈಜಿಪ್ಟಿನಲ್ಲಿ ಮುಂದಿನ ಏಳು ವರ್ಷ ಮಳೆ ಬೆಳೆ ಚೆನ್ನಾಗಿ ಆಗುತ್ತೆ. ಆದರೆ ಅದರ ನಂತರದ ಏಳು ವರ್ಷ ಭೀಕರ ಬರಗಾಲ ಬರುತ್ತೆ. ಹಾಗಾಗಿ ಒಬ್ಬ ಬುದ್ಧಿವಂತನನ್ನು ಆರಿಸಿ ಆಹಾರವನ್ನು ಕೂಡಿಸಿಟ್ಟರೆ ಬರಗಾಲದಲ್ಲಿ ಜನರು ಹೊಟ್ಟೆಗಿಲ್ಲದೇ ಸಾಯುವಂಥ ಪರಿಸ್ಥಿತಿ ಬರುವುದಿಲ್ಲ’ ಎಂದು ಹೇಳಿದ. ಇದನ್ನು ಕೇಳಿದ ಫರೋಹ ‘ನಾನು ನಿನ್ನನ್ನೇ ಆರಿಸಿದ್ದೇನೆ! ಈಜಿಪ್ಟಿನ ಉನ್ನತ ಅಧಿಕಾರಿಗಳಲ್ಲಿ ನೀನೇ ಎರಡನೆಯವನಾಗುವಿ!’ ಎಂದು ಹೇಳಿದ. ಯೋಸೇಫನಿಗೆ ಫರೋಹನ ಕನಸಿನ ಅರ್ಥ ಹೇಗೆ ಗೊತ್ತಾಯಿತು? ಯೋಸೇಫನಿಗೆ ಯೆಹೋವನು ಸಹಾಯ ಮಾಡಿದನು.
ಮುಂದಿನ ಏಳು ವರ್ಷಗಳಲ್ಲಿ ಯೋಸೇಫ ದವಸಧಾನ್ಯಗಳನ್ನು ಕೂಡಿಸಿಟ್ಟ. ಆಮೇಲೆ ಯೋಸೇಫ ಹೇಳಿದಂತೆ ಭೂಮಿಯ ಎಲ್ಲಾ ಕಡೆ ಬರಗಾಲ ಬಂದೇ ಬಿಟ್ಟಿತು. ಎಲ್ಲಾ ಕಡೆಯಿಂದ ಜನರು ಧಾನ್ಯಗಳನ್ನು ಕೊಂಡುಕೊಳ್ಳಲು ಯೋಸೇಫನ ಹತ್ತಿರ ಹೋಗುತ್ತಿದ್ದರು. ಈಜಿಪ್ಟಿನಲ್ಲಿ ಆಹಾರ ಸಿಗುತ್ತೆ ಎಂದು ಯೋಸೇಫನ ಅಪ್ಪ ಯಾಕೋಬನಿಗೆ ಗೊತ್ತಾದಾಗ ತನ್ನ ಹತ್ತು ಮಕ್ಕಳನ್ನು ಅಲ್ಲಿಗೆ ಕಳುಹಿಸಿದ.
ಯಾಕೋಬನ ಮಕ್ಕಳು ಯೋಸೇಫನ ಹತ್ತಿರ ಹೋದರು. ಅವರನ್ನು ನೋಡಿದ ತಕ್ಷಣ ಯೋಸೇಫ ಅವರ ಗುರುತು ಹಿಡಿದ. ಆದರೆ ಅಣ್ಣಂದಿರಿಗೆ ಅವನು ಯೋಸೇಫ ಎಂದು ಗೊತ್ತಾಗಲಿಲ್ಲ. ಅವರೆಲ್ಲರು ಯೋಸೇಫನಿಗೆ ಅಡ್ಡಬೀಳುತ್ತಾರೆ. ಆಗ ಯೋಸೇಫನಿಗೆ ಚಿಕ್ಕ ವಯಸ್ಸಿನಲ್ಲಿ ಕಂಡ ಕನಸು ನೆನಪಿಗೆ ಬರುತ್ತೆ. ಆದರೆ ತನ್ನ ಅಣ್ಣಂದಿರು ಬದಲಾಗಿದ್ದಾರಾ ಎಂದು ತಿಳಿದುಕೊಳ್ಳಬೇಕಿತ್ತು. ಅದಕ್ಕಾಗಿ ಅವನು ‘ನಮ್ಮ ದೇಶದ ರಹಸ್ಯಗಳನ್ನು ತಿಳಿದುಕೊಳ್ಳಲು ಬಂದಿರುವ ಗೂಢಾಚಾರರು ನೀವು’ ಎಂದು ಹೇಳುತ್ತಾನೆ. ಅದಕ್ಕೆ ಅವರು ‘ಇಲ್ಲ ಇಲ್ಲ! ನಾವು ಕಾನಾನ್ ದೇಶದಿಂದ ಬಂದಿದ್ದೇವೆ. ನಾವು 12 ಜನ ಅಣ್ಣತಮ್ಮಂದಿರು. ಅದರಲ್ಲಿ ಒಬ್ಬ ಸತ್ತು ಹೋದ. ಕೊನೆಯವನು ತಂದೆ ಜೊತೆ ಮನೆಯಲ್ಲಿದ್ದಾನೆ’ ಎಂದರು. ಆಗ ಯೋಸೇಫ ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿ. ಆಗ ನಾನು ನಿಮ್ಮನ್ನು ನಂಬುತ್ತೇನೆ’ ಅಂದನು. ಅವರೆಲ್ಲರು ತಮ್ಮ ತಂದೆಯ ಬಳಿಗೆ ಹೋದರು.
ದವಸಧಾನ್ಯ ಖಾಲಿ ಆದಾಗ ಯಾಕೋಬ ತನ್ನ ಮಕ್ಕಳನ್ನು ಮತ್ತೆ ಈಜಿಪ್ಟಿಗೆ ಕಳುಹಿಸಿದ. ಈ ಬಾರಿ ಅವರು, ಕೊನೆಯ ತಮ್ಮ ಬೆನ್ಯಾಮೀನನನ್ನು ಕರೆದುಕೊಂಡು ಹೋದರು. ಯೋಸೇಫ ತನ್ನ ಅಣ್ಣಂದಿರನ್ನು ಪರೀಕ್ಷಿಸಲು ತನ್ನ ಬೆಳ್ಳಿ ಲೋಟವನ್ನು ತಾನೇ ಬೆನ್ಯಾಮೀನನ ಚೀಲದಲ್ಲಿ ಹಾಕಿ ಅವರ ಮೇಲೆ ಕಳ್ಳತನದ ಆರೋಪ ಹಾಕಿದನು. ಯೋಸೇಫನ ಸೇವಕರಿಗೆ ಆ ಲೋಟ ಬೆನ್ಯಾಮೀನನ ಚೀಲದಲ್ಲಿ ಸಿಗುತ್ತದೆ. ಆಗ ಅಣ್ಣಂದಿರಿಗೆ ಭಯದಿಂದ ದಿಕ್ಕೇ ತೋಚಲಿಲ್ಲ. ಅವರು ಯೋಸೇಫನ ಹತ್ತಿರ ಹೋಗಿ ‘ನಮಗೆ ಬೇಕಾದರೆ ಶಿಕ್ಷೆ ಕೊಡಿ. ಆದರೆ ದಯವಿಟ್ಟು ನಮ್ಮ ತಮ್ಮನನ್ನು ಬಿಟ್ಟುಬಿಡಿ’ ಎಂದು ಬೇಡಿಕೊಂಡರು.
ಆಗ ತನ್ನ ಅಣ್ಣಂದಿರು ಬದಲಾಗಿದ್ದಾರೆ ಎಂದು ಯೋಸೇಫನಿಗೆ ಗೊತ್ತಾಯಿತು. ಅವನಿಗೆ ದುಃಖ ತಡೆದುಕೊಳ್ಳಲು ಆಗದೇ ಜೋರಾಗಿ ಅಳಲು ಶುರುಮಾಡಿದನು. ಆಮೇಲೆ ‘ನಾನೇ ನಿಮ್ಮ ತಮ್ಮ ಯೋಸೇಫ. ತಂದೆ ಇನ್ನೂ ಇದ್ದಾರಾ?’ ಅಂತ ಕೇಳಿದ. ಈ ಮಾತನ್ನು ಕೇಳಿದಾಗ ಅವನ ಅಣ್ಣಂದಿರಿಗೆ ಆಶ್ಚರ್ಯವೋ ಆಶ್ಚರ್ಯ! ನಂತರ ಯೋಸೇಫ ‘ನೀವು ನನ್ನನ್ನ ಮಾರಿದ್ದಕ್ಕೆ ಬೇಜಾರು ಮಾಡ್ಕೊಬೇಡಿ. ನಮ್ಮ ಜೀವ ಉಳಿಸೋಕೆ ದೇವರೇ ನನ್ನನ್ನ ಇಲ್ಲಿಗೆ ಕಳಿಸಿದ್ದಾನೆ. ಬೇಗ ಹೋಗಿ ತಂದೆಯನ್ನ ಕರ್ಕೊಂಡು ಬನ್ನಿ’ ಎಂದನು.
ಈ ಸಂತೋಷದ ಸುದ್ದಿಯನ್ನು ಅವರು ಬೇಗ ಹೋಗಿ ತಮ್ಮ ತಂದೆಗೆ ತಿಳಿಸಿ ಅವನನ್ನು ಈಜಿಪ್ಟಿಗೆ ಕರೆದುಕೊಂಡು ಬಂದರು. ವರ್ಷಾನುಗಟ್ಟಲೆ ದೂರವಿದ್ದ ತಂದೆ-ಮಗ ಕೊನೆಗೂ ಒಂದಾದರು.
“ನೀವು ಬೇರೆಯವರ ತಪ್ಪನ್ನ ಕ್ಷಮಿಸಿಲ್ಲ ಅಂದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆನೂ ನಿಮ್ಮನ್ನ ಕ್ಷಮಿಸಲ್ಲ.”—ಮತ್ತಾಯ 6:15
-