ಸೋಮವಾರ, ಸೆಪ್ಟೆಂಬರ್ 1
ನಮ್ಮ ಮೇಲೆ ಸೂರ್ಯ ಮೂಡ್ತಾನೆ.—ಲೂಕ 1:78.
ಯೆಹೋವ ನಮ್ಮೆಲ್ಲಾ ಕಷ್ಟಗಳನ್ನ ತೆಗೆದುಹಾಕೋ ಶಕ್ತಿಯನ್ನ ಯೇಸುಗೆ ಕೊಟ್ಟಿದ್ದಾನೆ. ಕೆಲವು ಸಮಸ್ಯೆಗಳನ್ನ ನಮ್ಮಿಂದ ಸರಿಮಾಡೋಕೆ ಆಗಲ್ಲ. ಆದ್ರೆ ಅಂಥ ಸಮಸ್ಯೆಗಳನ್ನ ತನ್ನಿಂದ ಸರಿಮಾಡೋಕೆ ಆಗುತ್ತೆ ಅಂತ ಯೇಸು ತೋರಿಸಿದ್ದಾನೆ. ಉದಾಹರಣೆಗೆ, ನಮ್ಮಲ್ಲಿ ಪಾಪ ಇರೋದ್ರಿಂದ ಕಾಯಿಲೆ ಬರುತ್ತೆ, ಇದ್ರಿಂದ ಸಾಯ್ತಾ ಇದ್ದೀವಿ. ಆದ್ರೆ ಇದನ್ನೆಲ್ಲಾ ತೆಗೆದುಹಾಕೋ ಶಕ್ತಿ ಯೇಸುಗಿದೆ. (ಮತ್ತಾ. 9:1-6; ರೋಮ. 5:12, 18, 19) ಆತನಿಗೆ ‘ಜನ್ರ ಎಲ್ಲ ರೀತಿಯ ರೋಗಗಳನ್ನ, ಕಾಯಿಲೆಗಳನ್ನ ವಾಸಿಮಾಡೋಕೆ’ ಆಗುತ್ತೆ. ಸತ್ತವರನ್ನೂ ಮತ್ತೆ ಬದುಕಿಸೋಕೆ ಆಗುತ್ತೆ. (ಮತ್ತಾ. 4:23; ಯೋಹಾ. 11:43, 44) ಯೇಸು ಅದ್ಭುತ ಮಾಡಿ ದೊಡ್ಡದೊಡ್ಡ ಬಿರುಗಾಳಿಯನ್ನ ನಿಲ್ಲಿಸಿದ್ದಾನೆ. ಕೆಟ್ಟ ದೇವದೂತರನ್ನ ಸೋಲಿಸಿದ್ದಾನೆ. (ಮಾರ್ಕ 4:37-39; ಲೂಕ 8:2) ಯೆಹೋವ ಕೊಟ್ಟಿರೋ ಶಕ್ತಿಯಿಂದ ಯೇಸು ಮುಂದೆ ಎಲ್ಲಾ ಸಮಸ್ಯೆಗಳನ್ನ ತೆಗೆದುಹಾಕ್ತಾನೆ ಅಂತ ತಿಳ್ಕೊಂಡಾಗ ನಮಗೆ ಎಷ್ಟು ಖುಷಿಯಾಗುತ್ತೆ ಅಲ್ವಾ! ತನ್ನ ಆಳ್ವಿಕೆಯಲ್ಲಿ ಏನೆಲ್ಲ ಆಶೀರ್ವಾದ ಸಿಗುತ್ತೆ ಅಂತ ಯೆಹೋವ ಹೇಳಿದ್ದಾನೋ ಅದೆಲ್ಲ ನಿಜ ಆಗುತ್ತೆ ಅನ್ನೋ ಗ್ಯಾರಂಟಿ ನಮಗೆ ಸಿಗುತ್ತೆ. ಯೇಸು ಭೂಮಿಯಲ್ಲಿ ಇದ್ದಾಗ ಆತನು ಮಾಡಿದ ಅದ್ಭುತಗಳಿಂದ ಸ್ವಲ್ಪ ಜನ್ರಿಗೆ ಸಹಾಯ ಆಯ್ತು. ಆದ್ರೆ ಆತನು ದೇವರ ಸರ್ಕಾರದಲ್ಲಿ ರಾಜನಾಗಿ ಆಳುವಾಗ ಲೋಕದಲ್ಲಿರೋ ಎಲ್ರಿಗೂ ಸಹಾಯ ಮಾಡ್ತಾನೆ. w23.04 3 ¶5-7
ಮಂಗಳವಾರ, ಸೆಪ್ಟೆಂಬರ್ 2
ಪವಿತ್ರಶಕ್ತಿ ಎಲ್ಲ ವಿಷ್ಯಗಳನ್ನ, ಅದ್ರಲ್ಲೂ ದೇವರ ಬಗ್ಗೆ ಇರೋ ಗಾಢವಾದ ವಿಷ್ಯಗಳನ್ನ ಹೇಳುತ್ತೆ.—1 ಕೊರಿಂ. 2:10.
ದೊಡ್ಡ ಸಭೆ ಅಂದ್ಮೇಲೆ ಅಲ್ಲಿ ತುಂಬ ಜನ ಪ್ರಚಾರಕರು ಇರ್ತಾರೆ. ಹಾಗಾಗಿ ನಾವು ತುಂಬ ಸಲ ಕೈ ಎತ್ತಿದ್ರೂ ನಮಗೆ ಅವಕಾಶನೇ ಸಿಗದೇ ಹೋಗಬಹುದು. ಹಾಗಂತ ಕೂಟಗಳಲ್ಲಿ ಉತ್ರ ಹೇಳೋದನ್ನ ನಿಲ್ಲಿಸಿಬಿಡಬೇಡಿ. ಪ್ರಯತ್ನ ಮಾಡ್ತಾನೇ ಇರಿ. ಕೂಟಗಳಲ್ಲಿರೋ ಎಲ್ಲಾ ಭಾಗಗಳನ್ನೂ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಒಂದಲ್ಲ ಒಂದು ಅವಕಾಶ ಖಂಡಿತ ಸಿಗುತ್ತೆ. ಕಾವಲಿನಬುರುಜು ಅಧ್ಯಯನದಲ್ಲಿ ಉತ್ರ ಹೇಳೋಕೆ ನೀವು ಏನೆಲ್ಲ ಮಾಡಬಹುದು? ಮುಖ್ಯ ವಿಷ್ಯಕ್ಕೂ ಒಂದೊಂದು ಪ್ಯಾರಾಗೂ ಏನು ಸಂಬಂಧ ಅಂತ ಯೋಚ್ನೆ ಮಾಡಿ ಉತ್ರಗಳನ್ನ ತಯಾರಿ ಮಾಡ್ಕೊಳ್ಳಿ. ಕೆಲವೊಮ್ಮೆ ಸುಲಭವಾಗಿ ಅರ್ಥ ಆಗದಿರೋ ಬೈಬಲ್ ವಿಷ್ಯಗಳು ಪ್ಯಾರದಲ್ಲಿ ಇರಬಹುದು. ಅಂಥ ಪ್ಯಾರಗಳನ್ನ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಅವಕಾಶ ಸಿಕ್ಕೇ ಸಿಗುತ್ತೆ. ಕೂಟದಲ್ಲಿ ಒಂದು ಉತ್ರ ಹೇಳೋಕೂ ಅವಕಾಶ ಸಿಗಲಿಲ್ಲಾಂದ್ರೆ ಆಗೇನು ಮಾಡೋದು? ಕೂಟ ಆರಂಭ ಆಗೋ ಮುಂಚೆನೇ ಚರ್ಚೆಯನ್ನ ನಡೆಸೋ ಸಹೋದರನ ಹತ್ರ ಮಾತಾಡಿ. ಯಾವ ಪ್ಯಾರಗೆ ಉತ್ರ ತಯಾರಿ ಮಾಡ್ಕೊಂಡು ಬಂದಿದ್ದೀರ ಅಂತ ಅವ್ರಿಗೆ ಹೇಳಿ. ಆಗ ಕೂಟದಲ್ಲಿ ಉತ್ರ ಹೇಳೋಕೆ ಒಂದು ಅವಕಾಶ ಆದ್ರೂ ಸಿಕ್ಕೇ ಸಿಗುತ್ತೆ. w23.04 21-22 ¶9-10
ಬುಧವಾರ, ಸೆಪ್ಟೆಂಬರ್ 3
ಯೋಸೇಫ . . . ಯೆಹೋವನ ದೂತ ಹೇಳಿದ ಹಾಗೇ ಮಾಡಿದ. ಮರಿಯಳನ್ನ ಮದುವೆ ಆದ.—ಮತ್ತಾ. 1:24.
ಯೋಸೇಫ ಒಬ್ಬ ಒಳ್ಳೇ ಗಂಡನಾಗಿರೋಕೆ ಕಾರಣ ಏನು ಗೊತ್ತಾ? ಅವನು ಎಲ್ಲಾನೂ ಯೆಹೋವ ಹೇಳಿದ ತರಾನೇ ಮಾಡ್ತಾ ಇದ್ದ. ಮೂರು ಸಂದರ್ಭಗಳಲ್ಲಿ ಯೆಹೋವ ಅವನಿಗೆ ತನ್ನ ಕುಟುಂಬನ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ಹೇಳಿದನು. ಅದನ್ನ ಪಾಲಿಸೋದು ಅಷ್ಟು ಸುಲಭ ಆಗಿರಲಿಲ್ಲ. ಆದ್ರೂ ಯೋಸೇಫ ಯೆಹೋವ ಹೇಳಿದ ತರಾನೇ ತಕ್ಷಣ ಮಾಡಿದ. (ಮತ್ತಾ. 1:20; 2:13-15, 19-21) ಇದ್ರಿಂದ ಅವನು ಮರಿಯನ ಕಾಪಾಡೋಕೆ ಆಯ್ತು. ಅವಳನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಆಯ್ತು. ಇದನ್ನೆಲ್ಲ ನೋಡಿದಾಗ ಮರಿಯಗೆ ಯೋಸೇಫನ ಮೇಲೆ ಪ್ರೀತಿ ಗೌರವ ಜಾಸ್ತಿ ಆಗಿರಬೇಕಲ್ವಾ? ಗಂಡಂದಿರಿಗೆ ಯೋಸೇಫ ಒಳ್ಳೇ ಮಾದರಿ ಆಗಿದ್ದಾನೆ. ಕುಟುಂಬನ ಹೇಗೆ ನೋಡ್ಕೊಂಡ್ರೆ ಯೆಹೋವನಿಗೆ ಇಷ್ಟ ಆಗುತ್ತೆ ಅನ್ನೋದನ್ನ ಕುಟುಂಬದ ಯಜಮಾನ್ರು ತಿಳ್ಕೊಬೇಕು. ಅದನ್ನ ಪಾಲಿಸೋಕೆ ಕಷ್ಟ ಆದ್ರೂ ಅದನ್ನ ಮಾಡಬೇಕು. ಹೀಗೆ ಮಾಡಿದಾಗ ನಿಮ್ಮ ಹೆಂಡತಿಯನ್ನ ನೀವೆಷ್ಟು ಪ್ರೀತಿಸ್ತೀರಿ ಅಂತ ತೋರಿಸ್ತೀರ. ನಿಮ್ಮ ಮಧ್ಯ ಇರೋ ಪ್ರೀತಿನೂ ಜಾಸ್ತಿ ಆಗುತ್ತೆ. ವನವಾಟುನಲ್ಲಿರೋ ಒಬ್ಬ ಸಹೋದರಿ ಮದುವೆ ಆಗಿ 20 ವರ್ಷ ದಾಟಿದೆ. ಅವರು ಏನು ಹೇಳ್ತಾರೆ ಅಂದ್ರೆ “ನನ್ನ ಗಂಡ ಯೆಹೋವನಿಗೆ ಏನಿಷ್ಟ ಅನ್ನೋದನ್ನ ಮೊದ್ಲು ತಿಳ್ಕೊಂಡು ಅದನ್ನೇ ಮಾಡ್ತಾರೆ. ಇದ್ರಿಂದ ನನಗೆ ಅವ್ರ ಮೇಲಿರೋ ಗೌರವ ಜಾಸ್ತಿ ಆಗಿದೆ. ಅವರು ಮಾಡೋ ನಿರ್ಧಾರಗಳೆಲ್ಲ ಸರಿಯಾಗೇ ಇರುತ್ತೆ ಅನ್ನೋ ನಂಬಿಕೆ ಬಂದಿದೆ.” w23.05 21 ¶5